ಸತ್ತವರ ಪಟ್ಟಿಯಲ್ಲಿ ಬದುಕಿರುವ ವ್ಯಕ್ತಿಯ ಹೆಸರು ಉಲ್ಲೇಖಿಸಿದ ಶೋಭಾ ಕರಂದ್ಲಾಜೆ: ವ್ಯಾಪಕ ಟೀಕೆ
ಮಂಗಳೂರು: ಕಳೆದ ನಾಲ್ಕು ವರ್ಷಗಳಲ್ಲಿ ಹತ್ಯೆಯಾದ ಹಿಂದು, ಆರ್ಎಸ್ಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಪಟ್ಟಿಯೊಂದನ್ನು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಕಳುಹಿಸಿರುವ ಉಡುಪಿ–ಚಿಕ್ಕಮಗಳೂರು ಸಂಸದೆ ಶೋಭಾ ಕರದ್ಲಾಜೆ, ಪಟ್ಟಿಯಲ್ಲಿ ಜೀವಂತ ಇರುವವರ ಹೆಸರನ್ನೂ ಉಲ್ಲೇಖಿಸಿ ಟೀಕೆಗೆ ಗುರಿಯಾಗಿದ್ದಾರೆ.
23 ಹೆಸರುಗಳನ್ನೊಳಗೊಂಡ, ರಾಜಕೀಯ ಹತ್ಯೆಗೆ ಸಂಬಂಧಿಸಿದ ಪಟ್ಟಿಯಲ್ಲಿ ವೈಯಕ್ತಿಕ ಕೊಲೆ, ಆತ್ಮಹತ್ಯೆ ಪ್ರಕರಣಗಳನ್ನೂ ಸೇರಿಸಲಾಗಿದೆ. ಈ ಪೈಕಿ, ಜೀವಂತ ಇರುವ ಅಶೋಕ್ ಪೂಜಾರಿ ಎಂಬುವವರ ಹೆಸರು ಉಲ್ಲೇಖಿಸಿದ್ದು ವ್ಯಾಪಕ ಟೀಕೆಗೆ ಗುರಿಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಟೀಕೆ ವ್ಯಕ್ತವಾಗಿದೆ.
ಹಲ್ಲೆಗೊಳಗಾಗಿದ್ದ ಅಶೋಕ್ ಪೂಜಾರಿ: ಮೂಲತಃ ಕಾರ್ಕಳ ತಾಲ್ಲೂಕಿನವರಾಗಿರುವ ಅಶೋಕ್ ಪೂಜಾರಿ ಮಂಗಳೂರಿನಲ್ಲಿ ವಾದ್ಯದ ತಂಡದಲ್ಲಿ ಕೆಲಸ ಮಾಡುತ್ತಿರುವವರು. 2015ರಲ್ಲಿ ಮಂಗಳೂರಿನ ಕುಲಶೇಖರದಿಂದ ಗಣೇಶೋತ್ಸವ ಸಮಾರಂಭ ಮುಗಿಸಿ ವಾಪಸಾಗುತ್ತಿದ್ದಾಗ ಅವರ ಮೇಲೆ ಹಲ್ಲೆ ನಡೆದಿತ್ತು. ಗಂಭೀರ ಗಾಯಗೊಂಡಿದ್ದ ಅವರು 45 ದಿನಗಳ ಚಿಕಿತ್ಸೆ ಬಳಿಕ ಚೇತರಿಸಿಕೊಂಡಿದ್ದರು. ಆದರೆ, ಮೃತರ ಪಟ್ಟಿಯಲ್ಲಿ ಇವರ ಹೆಸರನ್ನೂ ಶೋಭಾ ಉಲ್ಲೇಖಿಸಿದ್ದಾರೆ.


Comments
Post a Comment