ಹಿಂಸಾಗ್ರಸ್ತ ಮಂದಸೌರ್ಗೆ ಹೊರಟಿದ್ದ ಜ್ಯೋತಿರಾದಿತ್ಯ ಸಿಂಧಿಯಾಗೆ ತಡೆ
ಇಂದೋರ್: ಹಿಂಸಾಗ್ರಸ್ತ ಮಂದಸೌರ್ಗೆ ಭೇಟಿ ನೀಡುವ ಕಾಂಗ್ರೆಸ್ ಮುಖಂಡ ಜ್ಯೋತಿರಾದಿತ್ಯ ಸಿಂಧಿಯಾ ಅವರ ಪ್ರಯತ್ನವನ್ನು ಪೊಲೀಸರು ವಿಫಲಗೊಳಿಸಿದ್ದಾರೆ.
ಭೋಪಾಲ್ನಲ್ಲಿ ಸೋಮವಾರ ತಮ್ಮ ಬೆಂಬಲಿಗರೊಂದಿಗೆ ಸತ್ಯಾಗ್ರಹ ನಡಸಿದ್ದ ಸಿಂಧಿಯಾ, ಇಂದು ಮಂದಸೌರ್ಗೆ ತೆರಳಿ ಸಾರ್ವಜನಿಕ ಸಭೆ ನಡೆಸಲು ಉದ್ದೇಶಿಸಿದ್ದರು.
ಆದರೆ ಅವರು ಅಲ್ಲಿಗೆ ತಲುಪುವ ಮೊದಲೇ ಜವೋರಾ ಎಂಬಲ್ಲಿ ಟೋಲ್ಬೂತ್ ಬಳಿ ಪೊಲೀಸರು ತಡೆದರು. ಮಂದಸೌರ್ನಲ್ಲಿ ಕರ್ಫ್ಯೂ ತೆಗೆದು ಹಾಕಿದ ಬಳಿಕ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ಜಾರಿಯಲ್ಲಿದ್ದು ಮಧ್ಯಪ್ರದೇಶ ಪೊಲೀಸರು ಹಾಗೂ ಕ್ಷಿಪ್ರ ಕಾರ್ಯಾಚರಣೆ ಪಡೆಯನ್ನು ಭಾರೀ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ.
ಸಿಂಧಿಯಾ ಜತೆಗೆ ಮಾಜಿ ಕೇಂದ್ರ ಸಚಿವ ಕಾಂತಿಲಾಲ್ ಭುರಿಯಾ ಹಾಗೂ ಶಾಸಕ ಮಹೇಂದ್ರ ಸಿಂಗ್ ಕಲುಖೇಡ ಅವರನ್ನೂ ಪೊಲೀಸರು ವಶಕ್ಕೆ ತೆಗೆದುಕೊಂಡರು. ನಂತರ ಬಿಡುಗಡೆ ಮಾಡಿದರು.
'ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮಂಡಸೌರ್ಗೆ ಭೇಟಿ ನೀಡಬಹುದಾದರೆ ಸಾಮಾನ್ಯ ಜನರನ್ನು ತಡೆಯುವುದೇಕೆ?' ಎಂದು ಸಿಂಧಿಯಾ ಪೊಲೀಸ್ ಅಧಿಕಾರಿಗಳಿಗೆ ಪ್ರಶ್ನಿಸಿದರು.
'ನಾವು ಮೃತಪಟ್ಟ ರೈತರ ಕುಟುಂಬದವರನ್ನು ಭೇಟಿಯಾಗಿ ಸಾಂತ್ವನ ಹೇಳುವುದಕ್ಕಷ್ಟೇ ತೆರಳುತ್ತಿದ್ದೇವೆ. ನಾವು ಅಲ್ಲಿ ಗಲಭೆಗೆ ಕುಮ್ಮಕ್ಕು ನೀಡಲು ಹೋಗುತ್ತಿಲ್ಲ' ಎಂದು ಸಿಂಧಿಯಾ ಹೇಳಿದರು.
ನಂತರ ಬಿಜೆಪಿ ಸರಕಾರದ ವಿರುದ್ಧ ಸಿಂಧಿಯಾ ಹಾಗೂ ಅವರ ಬೆಂಬಲಿಗರು ಘೋಷಣೆ ಕೂಗಿದರು
Comments
Post a Comment